ಶ್ರೀ ವಿಜಯದಾಸರ ಕೃತಿ..
ಮುಂಜಾನೆ ಭಗವಂತನ ದಶಾವತಾರ ಸ್ಮರಣೆ ಮಾಡಿದರೆ ನಮಗೆ ಬರುವ ಆಪತ್ತುಗಳು ಪರಿಹಾರ .ಸಂತೋಷ ನೆಮ್ಮದಿ ಮುಖ್ಯವಾಗಿ ತಾಳ್ಮೆ ಕೊಡುತ್ತಾನೆ.
ಕೂಗೆಲೋ ಮನುಜ ಕೂಗೆಲೋ l
ಸಾಗರಶಯನನೆ ಜಗಕೆ ದೈವವೆಂದು ll
ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣ ಸಚ್ಚಿದಾನಂದೈಕ l ಸರ್ವೋತ್ತಮಸಚ್ಚರಿತ ರಂಗ ನಾರಾಯಣ ವೇದ ಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು||1||
ನರಹರಿ ಮುಕುಂದ ನಾರಾಯಣ ದೇವ ಪರಮ ಪುರುಷ l ಹರಿ ಹಯವದನ ಸಿರಿಧರ ವಾಮನ ದಾಮೋದರ ಗಿರಿಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು||2||
ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕವರದ ಅಪಾರ ಸದ್ಗುಣ ನಿಲಯ l ಮುರುಮರ್ದನ ಮಂಜು ಭಾಷಣ ಕೇಶವನಿರ್ಮಲ ದೇವ ಭೂವರಾಹಮೂರುತಿ ಯೆಂದು |3||
ನಿಗಮವಂದಿತ ವಾರಿಜನಾಭ ಅನಿರುದ್ಧ ಅಘನಾಶ l ಅಪ್ರಾಕೃತ ಶರೀರ ಸುಗುಣ ಸಾಕಾರ ಜಗದತ್ಯಂತ ಭಿನ್ನ ತ್ರಿಗುಣರಹಿತ ನರಮೃಗ ರೂಪಾನೆಂದು ||4||
ವಟಪತ್ರಶಯನ ಜಗದಂತರ್ಯಾಮಿ ಕಟಕ ಮುತ್ತಿನಹಾರ l ಕೌಸ್ತುಭ ವಿಹಾರ ತಟಿತ್ಕೋಟಿ ನಿಭಕಾಯ ಪೀತಾಂಬರಧರ ನಿಟಿಲಲೋಚನ ಬಾಲವಟು ಮೂರುತಿಯೆಂದು||5||
ವಿಷ್ಣು ಸಂಕರುಷಣ ಮಧುಸೂದನ ಶ್ರೀಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ l ಜಿಷ್ಣು ಸಾರಥಿ ರಾಮ ಅಚ್ಯುತಾಧೋಕ್ಷಜ ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು ||6||
ಇಭರಾಜ ಪರಿಪಾಲ ಇಂದಿರೆಯರಸ ನಭ ಗಂಗಾಜನಕ ಜನಾದರ್ನನೆ l ವಿಭುವೇ ವಿಶ್ವರೂಪ ವಿಶ್ವನಾಟಕ ಋಷಭ ದತ್ತಾತ್ರೇಯ ಶ್ರೀ ರಾಮಮೂರುತಿಯೆಂದು ||7||
ವೈಕುಂಠ ವಾಮನ ವಾಸುದೇವ ರಂಗಲೋಕೇಶ ನವನೀತ ಚೋರ l ಜಾರ ಗೋಕುಲವಾಸಿ ಗೋವಳರಾಯ ಶ್ರೀಧರ ಏಕಮೇವ ಶ್ರೀ ಕೃಷ್ಣ ಮೂರುತಿಯೆಂದು ||8||
ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ ಅಸುರ ಭಂಜನ ತ್ರಿವಿಕ್ರಮ ಕಪಿಲ ಕುಸುಮ ಶರನಯ್ಯ l ಶಾರ್ಙಧರಾಚಕ್ರಿ ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು ||9||
ಸರ್ವನಾಮಕ ಸರ್ವಚೇಷ್ಟಕ ಸರ್ವೇಶ ಸರ್ವಮಂಗಳ ಸರ್ವಸಾರ ಭೋಕ್ತ l ಸರ್ವಾಧಾರಕ ಸರ್ವ ಗುಣಗಣ ಪರಿಪೂರ್ಣಸರ್ವ ಮೂಲಾಧಾರ ಕಲ್ಕಿ ಮೂರುತಿಯೆಂದು ||10||
ಈ ಪರಿ ಕೂಗಲು ಆಪತ್ತು ಪರಿಹಾರ ಅಪಾರ ಜನ್ಮ ಬೆಂಬಿಡದಲೆ ಸಪ್ತದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ ಅಪವರ್ಗದಲ್ಲಿಟ್ಟು ಆನಂದಪಡಿಸುವ ||11||
ದಾಸರು “ಈ ಪರಿ ಕೂಗಲು ಆಪತ್ತು ಪರಿಹಾರ ” ಎಂದು ಹೇಳಿದ್ದಾರೆ. ಕೆಲಸಕ್ಕೆ ಬಾರದ ವಿಚಾರಕ್ಕೆ , ಪರ ನಿಂದೆಗೆ ಭೂಮಿ ನಡುಗುವ ರೀತಿ ಕೂಗಾಡುತ್ತೇವೆ. ಹೌದಲ್ವಾ . ಭಗವಂತನ ಅವತಾರಗಳ ಜೋರಾಗಿ ಹೇಳಿ ಕೊಳ್ಳೋಣ .