ಕೂಗೆಲೋ ಮನುಜ ಕೂಗೆಲೋ l

ಶ್ರೀ ವಿಜಯದಾಸರ ಕೃತಿ..

ಮುಂಜಾನೆ ಭಗವಂತನ ದಶಾವತಾರ ಸ್ಮರಣೆ ಮಾಡಿದರೆ ನಮಗೆ ಬರುವ ಆಪತ್ತುಗಳು ಪರಿಹಾರ .ಸಂತೋಷ ನೆಮ್ಮದಿ ಮುಖ್ಯವಾಗಿ ತಾಳ್ಮೆ ಕೊಡುತ್ತಾನೆ.

ಕೂಗೆಲೋ ಮನುಜ ಕೂಗೆಲೋ l
ಸಾಗರಶಯನನೆ ಜಗಕೆ ದೈವವೆಂದು ll

ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣ ಸಚ್ಚಿದಾನಂದೈಕ l ಸರ್ವೋತ್ತಮಸಚ್ಚರಿತ ರಂಗ ನಾರಾಯಣ ವೇದ ಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು||1||

ನರಹರಿ ಮುಕುಂದ ನಾರಾಯಣ ದೇವ ಪರಮ ಪುರುಷ l ಹರಿ ಹಯವದನ ಸಿರಿಧರ ವಾಮನ ದಾಮೋದರ ಗಿರಿಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು||2||

ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕವರದ ಅಪಾರ ಸದ್ಗುಣ ನಿಲಯ l ಮುರುಮರ್ದನ ಮಂಜು ಭಾಷಣ ಕೇಶವನಿರ್ಮಲ ದೇವ ಭೂವರಾಹಮೂರುತಿ ಯೆಂದು |3||

ನಿಗಮವಂದಿತ ವಾರಿಜನಾಭ ಅನಿರುದ್ಧ ಅಘನಾಶ l ಅಪ್ರಾಕೃತ ಶರೀರ ಸುಗುಣ ಸಾಕಾರ ಜಗದತ್ಯಂತ ಭಿನ್ನ ತ್ರಿಗುಣರಹಿತ ನರಮೃಗ ರೂಪಾನೆಂದು ||4||

ವಟಪತ್ರಶಯನ ಜಗದಂತರ್ಯಾಮಿ ಕಟಕ ಮುತ್ತಿನಹಾರ l ಕೌಸ್ತುಭ ವಿಹಾರ ತಟಿತ್ಕೋಟಿ ನಿಭಕಾಯ ಪೀತಾಂಬರಧರ ನಿಟಿಲಲೋಚನ ಬಾಲವಟು ಮೂರುತಿಯೆಂದು||5||

ವಿಷ್ಣು ಸಂಕರುಷಣ ಮಧುಸೂದನ ಶ್ರೀಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ l ಜಿಷ್ಣು ಸಾರಥಿ ರಾಮ ಅಚ್ಯುತಾಧೋಕ್ಷಜ ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು ||6||

ಇಭರಾಜ ಪರಿಪಾಲ ಇಂದಿರೆಯರಸ ನಭ ಗಂಗಾಜನಕ ಜನಾದರ್ನನೆ l ವಿಭುವೇ ವಿಶ್ವರೂಪ ವಿಶ್ವನಾಟಕ ಋಷಭ ದತ್ತಾತ್ರೇಯ ಶ್ರೀ ರಾಮಮೂರುತಿಯೆಂದು ||7||

ವೈಕುಂಠ ವಾಮನ ವಾಸುದೇವ ರಂಗಲೋಕೇಶ ನವನೀತ ಚೋರ l ಜಾರ ಗೋಕುಲವಾಸಿ ಗೋವಳರಾಯ ಶ್ರೀಧರ ಏಕಮೇವ ಶ್ರೀ ಕೃಷ್ಣ ಮೂರುತಿಯೆಂದು ||8||

ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ ಅಸುರ ಭಂಜನ ತ್ರಿವಿಕ್ರಮ ಕಪಿಲ ಕುಸುಮ ಶರನಯ್ಯ l ಶಾರ್ಙಧರಾಚಕ್ರಿ ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು ||9||

ಸರ್ವನಾಮಕ ಸರ್ವಚೇಷ್ಟಕ ಸರ್ವೇಶ ಸರ್ವಮಂಗಳ ಸರ್ವಸಾರ ಭೋಕ್ತ l ಸರ್ವಾಧಾರಕ ಸರ್ವ ಗುಣಗಣ ಪರಿಪೂರ್ಣಸರ್ವ ಮೂಲಾಧಾರ ಕಲ್ಕಿ ಮೂರುತಿಯೆಂದು ||10||

ಈ ಪರಿ ಕೂಗಲು ಆಪತ್ತು ಪರಿಹಾರ ಅಪಾರ ಜನ್ಮ ಬೆಂಬಿಡದಲೆ ಸಪ್ತದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ ಅಪವರ್ಗದಲ್ಲಿಟ್ಟು ಆನಂದಪಡಿಸುವ ||11||

ದಾಸರು “ಈ ಪರಿ ಕೂಗಲು ಆಪತ್ತು ಪರಿಹಾರ ” ಎಂದು ಹೇಳಿದ್ದಾರೆ. ಕೆಲಸಕ್ಕೆ ಬಾರದ ವಿಚಾರಕ್ಕೆ , ಪರ ನಿಂದೆಗೆ ಭೂಮಿ ನಡುಗುವ ರೀತಿ ಕೂಗಾಡುತ್ತೇವೆ. ಹೌದಲ್ವಾ . ಭಗವಂತನ ಅವತಾರಗಳ ಜೋರಾಗಿ ಹೇಳಿ ಕೊಳ್ಳೋಣ .

Leave a Reply

Your email address will not be published. Required fields are marked *

Translate »